ಕನ್ನಡ ಚಿತ್ರರಂಗದಲ್ಲೇ ವಿಭಿನ್ನ ಪ್ರಯತ್ನವೆನ್ನಬಹುದಾದ ‘ಐತಲಕ್ಕಡಿ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರಕುಟೀರ ಸಂಸ್ಥೆಯ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ೧೦೮ಕ್ಕೂ ಅಧಿಕ ಕಲಾವಿದರು ಅಭಿನಯಿಸಿದ್ದಾರೆ.
ನಮ್ಮ ಸ್ಟುಡಿಯೋದಲ್ಲಿ ಸಂಕಲನಗೊಂಡ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ನಡೆದಿದೆ. ಆಕಾಶ್ ಸ್ಟುಡಿಯೊದಲ್ಲಿ ಗ್ರಾಫ಼ಿಕ್ನಿಂದ ಸಿಂಗಾರಗೊಂಡ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಹಾಗೂ ಡಿಟಿಎಸ್ ಅಳವಡಿಸಲಾಗಿದೆ ಎಂದು ಚಿತ್ರಕುಟೀರ ಸಂಸ್ಥೆಯ ಮುಖ್ಯಸ್ಥರಾದ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.
ನಿರ್ಮಾಪಕರಲ್ಲೊಬ್ಬರಾಗಿರುವ ಬುಲೆಟ್ಪ್ರಕಾಶ್ ಹಾಗೂ ರಂಗಾಯಣರಘು ಚಿತ್ರದ ಪ್ರಮುಖ ಪಾತ್ರದಲ್ಲಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ನವರಸನಾಯಕ ಜಗ್ಗೇಶ್, ಸುದೀಪ್, ವಿಜಯ್, ವಿಜಯರಾಘವೇಂದ್ರ, ನೀತು, ಮುಂತಾದ ಕಲಾವಿದರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈಗಾಗಲ್ಲೇ ಬಿಡುಗಡೆಗೊಂಡಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಸಾಧುಕೋಕಿಲಾ ‘ಐತಲಕ್ಕಡಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ತುಷಾರ ರಂಗನಾಥ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಆರ್.ಡಿ.ರವಿ ಅವರ ಸಂಕಲನವಿದೆ.